ಮಂಗಳೂರು: ಕುಂಭಮೇಳಕ್ಕೆ ತೆರಳಿದ್ದ ರಾಜ್ಯದ ಮಾಜಿ ಕ್ರೀಡಾಪಟು ಬೃಂದಾ ಪ್ರಭು(68) ಹೃದಯಾಘಾತದಿಂದ ನಿಧನರಾಗಿರುವ ಘಟನೆ ಕಾಶಿಯಲ್ಲಿ ನಡೆದಿದೆ.
ಬೃಂದಾ ಪ್ರಭು ಅವರು ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ಹೊರಟು ಪ್ರಯಾಗ್ ರಾಜ್ಗೆ ಹೋಗಿ ಪುಣ್ಯಸ್ನಾನ ಮಾಡಿ, ಭಾನುವಾರ ಕಾಶಿಗೆ ತಲುಪಿ ವಿಶ್ವೇಶ್ವರನ ದರ್ಶನ ಮುಗಿಸಿ ಮಲಗಿದ್ದರು, ರಾತ್ರಿ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ವಾರಾಣಸಿಯಲ್ಲೇ ನೆರವೇರಿಸಲಾಗುವುದು ಕುಟುಂಬಸ್ಥರು ಹೇಳಿದ್ದಾರೆ.
ರಾಷ್ಟ್ರೀಯ ಅಥ್ಲೆಟಿಕ್ಸ್ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಬೃಂದಾ ಪ್ರಭು, ಬೆಂಗಳೂರು ವಿಶ್ವವಿದ್ಯಾಲಯದ ವಾಲಿಬಾಲ್ ತಂಡದ ಉಪನಾಯಕಿಯೂ ಆಗಿದ್ದರು. ಮೂರೂವರೆ ದಶಕಗಳ ಹಿಂದೆ ಅಂತರರಾಷ್ಟ್ರೀಯ ಮಹಿಳಾ ಫುಟ್ಬಾಲ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಂಚೆ ಮತ್ತು ತಂತಿ ಇಲಾಖೆಯ ಅಖಿಲ ಭಾರತ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದರು. ಬೃಂದಾ ಅವರು, ಪತಿ, ಮಾಜಿ ಅಂತರರಾಷ್ಟ್ರೀಯ ಅಥ್ಲೆಟ್, ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ಉದಯ ಪ್ರಭು ಮತ್ತು ಪುತ್ರನನ್ನು ಅಗಲಿದ್ದಾರೆ.
