(ನ್ಯೂಸ್ ಉಬಾರ್) ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಕಲ್ಲತ್ತಿ ಪ್ರದೇಶದಲ್ಲಿಕಾಳ್ಗಿಚ್ಚು ವ್ಯಾಪಕವಾಗಿದ್ದು, ಮೂರು ದಿನಗಳ ಹರಸಾಹಸದ ಬಳಿಕ ಅಗ್ನಿಶಾಮಕ ದಳ ಮತ್ತು ಊರವರ ಪ್ರಯತ್ನದಿಂದ ಬೆಂಕಿಯನ್ನು ನಿಯಂತ್ರಿಸಲಾಗಿದೆ ತಿಳಿದು ಬಂದಿದೆ.
ಕಲ್ಲತ್ತಿ ಪ್ರದೇಶದ ಕಾಡು ಮತ್ತು ಸರಕಾರಿ ಗೇರು ತೋಟದ ಒಳಗೆ ಸೋಮವಾರ ಬೆಂಕಿ ಕಾಣಿಸಿಕೊಂಡಿತ್ತು. ಗೇರು ತೋಟದ ನೂರಾರು ಹೂ, ಕಾಯಿ ಬಿಟ್ಟ ಮರಗಳು ಬೆಂಕಿಗಾಹುತಿಯಾಗಿದ್ದು, ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಅಪಾರ ನಷ್ಟ ಉಂಟಾಗಿದೆ.
ಸಮೀಪದ ಖಾಸಗಿ ರಬ್ಬರ್ ತೋಟಗಳಿಗೂ ಬೆಂಕಿ ಹೊತ್ತಿಕೊಂಡಿದ್ದು, ಮೂವರು ಕೃಷಿಕರ ತೋಟಗಳಿಗೂ ಹಾನಿಯಾಗಿದೆ.
ತೋಟಗಳಿಗೆ ಆವರಿಸಿದ ಬೆಂಕಿಯನ್ನು ಸ್ಥಳೀಯರು ಅಗ್ನಿಶಾಮಕ ದಳದವರ ಸಹಕಾರದೊಂದಿಗೆ ನಂದಿಸಿದ್ದಾರೆ. ಅಗ್ನಿಶಾಮಕ ವಾಹನವು ಗೇರುತೋಟದ ಒಳಗೆ ಸಂಚರಿಸಲು ಅಸಾಧ್ಯವಾಗಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಹಿನ್ನಡೆಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುಮಾರು 50 ಎಕ್ರೆ ವ್ಯಾಪ್ತಿಯ ಗೇರುತೋಟದ ಅರ್ಧದಷ್ಟು ಗೇರು ನೆಡುತೋಪು ಬೆಂಕಿಗಾಹುತಿಯಾಗಿರುವ ಭೀತಿ ಇದೆ.
