ಶ್ರೀನಗರ: ಪಾಕಿಸ್ತಾನವು ಭಾರತದ ಮೇಲೆ ದಾಳಿಯನ್ನು ಮುಂದುವರೆಸಿದ್ದು, ಜಮ್ಮುವಿನ ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿನ ಹಲವು ಸ್ಥಳಗಳ ಮೇಲೆ ರಾಕೆಟ್ ದಾಳಿ ಮಾಡಿದೆ. ಈ ಎಲ್ಲಾ ಕ್ಷಿಪಣಿಗಳನ್ನು ಭಾರತೀಯ ಸೇನೆಯ ಎಸ್ – 400 ವಾಯು ರಕ್ಷಣಾ ವ್ಯವಸ್ಥೆಯು ತಡೆ ಹಿಡಿದಿದೆ.
ಹಿಮಾಚಲ ಪ್ರದೇಶದಲ್ಲಿ ಧರ್ಮಸಲದಲ್ಲಿ ನಡೆಯುತ್ತಿದ್ದ ಐಪಿಎಲ್ ಮ್ಯಾಚ್ (IPL Cancel) ರದ್ದಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ನಡುವೆ ನಡೆಯುತ್ತಿದ್ದ ಐಪಿಎಲ್ ಮ್ಯಾಚ್ ಇದೀಗ ಪಂದ್ಯಾಟದ ಅರ್ದದಲ್ಲಿ ಸ್ಥಗಿತಗೊಳಿಸಲಾಗಿದೆ.
ಮಂಗಳವಾರ ರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತ ಸೇನೆ ದಾಳಿ ನಡೆಸಿತ್ತು. ಒಂದು ದಿನದ ನಂತರ, ಬುಧವಾರ ರಾತ್ರಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ವಾಯುನೆಲೆ ಸೇರಿದಂತೆ ಜಮ್ಮುವಿನ ಹಲವು ಸ್ಥಳಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿತ್ತು. ಸದ್ಯ ಮುಂದುವರೆದು ಜಮ್ಮುವಿನ ಹಲವು ಪ್ರದೇಶಗಳ ಮೇಲೆ ಗುರುವಾರ ಸಂಜೆ ಕ್ಷಿಪಣಿ ದಾಳಿ ನಡೆದಿದೆ.
ಜಮ್ಮು ನಾಗರಿಕ ವಿಮಾನ ನಿಲ್ದಾಣ, ಸಾಂಬಾ, ಆರ್ಎಸ್ ಪುರ, ಅರ್ನಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದಿಂದ 8 ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಭದ್ರತಾ ಸಂಸ್ಥೆಗಳು ದೃಢಪಡಿಸಿವೆ. ಅವೆಲ್ಲವನ್ನೂ ಯಶಸ್ವಿಯಾಗಿ ಎಸ್ – 400 ವಾಯು ರಕ್ಷಣಾ ವ್ಯವಸ್ಥೆ ತಡೆ ಹಿಡಿಯಿತು ರಕ್ಷಣೆ ಮಾಡಿದೆ.
ಪಾಕಿಸ್ತಾನದ F-16 ವಿಮಾನವನ್ನು ಇದೀಗ ಭಾರತ ಹೊಡೆದುರುಳಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದೊಂದಿಗೆ ಗಡಿ ಹೊಂದಿರುವ ಜಮ್ಮು, ಪಂಜಾಬ್, ರಾಜಸ್ತಾನದಲ್ಲಿ ವಾಹನ ಸಂಚಾರ ನಿಷೇಧಿಸಿ ವಿದ್ಯುತ್ ದೀಪಗಳನ್ನು ಆರೀಸಲು ಆದೇಶ ಹೊರಡಿಸಲಾಗಿದೆ.
