ವಿಟ್ಲ: ವಿಟ್ಲ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಮೊಹಮ್ಮದ್ ಪೊನೆಟ್ಟು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ. ಮಸೀದಿಯ ಕೈತೋಟದಲ್ಲಿ ಕೆಲಸ ಮಾಡುತ್ತಿರುವಾಗ ಪರಿಚಿತರಿಂದಲೇ ಈ ದಾಳಿ ನಡೆದಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಮಾರ್ಚ್ 10ರಂದು ಸಂಜೆ ಅಶ್ರಫ್ ಮೊಹಮ್ಮದ್ ಪೊನೆಟ್ಟು ಅವರು ಕೈತೋಟದಲ್ಲಿ ಗಿಡಗಳಿಗೆ ನೀರು ಹಾಯಿಸುತ್ತಿದ್ದ ವೇಳೆ, ಆರೋಪಿ ಅಬ್ದಾಲ್ ಪೂರ್ ಎಂಬಾತ ದ್ವಿಚಕ್ರ ವಾಹನದಲ್ಲಿ ಆಗಮಿಸಿ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಬಳಿಕ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಅವರ ಕೈಗೆ ಹೊಡೆದು ನೆಲಕ್ಕೆ ದೂಡಿದ್ದು, ಎದೆಗೆ ಕಾಲಿನಿಂದ ಒದ್ದೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಈ ಘಟನೆಯ ನಂತರ ಆರೋಪಿ ಅಫ್ರಿಸ್, ಶೌಕತ್ ಅಲಿ ಹಾಗೂ ಶಪೀಕ್ ಎಂಬವರು ಮೊಬೈಲ್ ಮೂಲಕ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.
ಪೊಲೀಸರ ಕ್ರಮ:
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 2023ರ ಸೆಕ್ಷನ್ 118(1), 352, 352(2), 351(3), 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಶ್ರಫ್ ಮೊಹಮ್ಮದ್ ಪೊನೆಟ್ಟು ಅವರು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದು, ಶಾಂತ ಸ್ವಭಾವದ, ಮಾನವೀಯ ಗುಣವಿರುವ ವ್ಯಕ್ತಿ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಅವರ ಮೇಲೆ ನಡೆದ ದಾಳಿಯನ್ನು ಸ್ಥಳೀಯರು ಖಂಡಿಸಿದ್ದು, ಸೂಕ್ತ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
