ಮೂಡುಬಿದಿರೆ: ಮೂಡುಬಿದಿರೆಯ ಅಳಿಯೂರಿನಲ್ಲಿರುವ ಪಾಕ ತಜ್ಞರ ಮನೆಗೆ ಕಳ್ಳರು ಹಗಲು ವೇಳೆಯೇ ನುಗ್ಗಿದ್ದು ಮನೆಯ ಕಪಾಟಿನಲ್ಲಿದ್ದ ಮೂರೂವರೆ ಲಕ್ಷ ರೂ. ನಗದು ಹಾಗೂ 20 ಪವನ್ ಚಿನ್ನಾಭರಣವನ್ನು ದೋಚಿದ ಘಟನೆ ನಿನ್ನೆ ನಡೆದಿದೆ.
ಅಳಿಯೂರಿನ ನೇಲಡೆಯ ನಿವಾಸಿ, ಖ್ಯಾತ ಪಾಕತಜ್ಞರಾಗಿರುವ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಕಳ್ಳತನ ನಡೆದ ಸಮಯದಲ್ಲಿ ಮನೆಯಲ್ಲಿ ಅವರ ಮಗಳ ಹೊರತಾಗಿ ಬೇರಾರೂ ಇರಲಿಲ್ಲ. ಪ್ರಶಾಂತ್ ಮತ್ತು ಅವರ ಮಗ ಮುಲ್ಕಿಯಲ್ಲಿ ಅಡುಗೆ ಕೆಲಸಕ್ಕೆ ಹೋಗಿದ್ದು ಅವರ ಪತ್ನಿ ಶಿರ್ತಾಡಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು.
ವಿಷಯ ಅರಿತ ಕಳ್ಳರು ಮನೆಯೊಳಗೆ ನುಗ್ಗಿ ಕಪಾಟು ತೆರೆಯುವ ಸದ್ದು ಕೇಳಿ ಯುವತಿ ಬಂದು ನೋಡಿದಾಗ ಬೊಬ್ಬೆ ಹೊಡೆಯದಂತೆ ಆಕೆಯ ಬಾಯಿಗೆ ಒತ್ತಿ ಹಿಡಿದರೆನ್ನಲಾಗಿದೆ. ಅಲ್ಲದೆ ಆಕೆಗೆ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ನಗದು ಮತ್ತು ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆಳಿಗ್ಗೆ ಹತ್ತೂವರೆ ಗಂಟೆ ವೇಳೆಗೆ ಈ ಘಟನೆ ಸಂಭವಿಸಿದ್ದು, ಮಧ್ಯಾಹ್ನ 12.30 ವೇಳೆಗೆ ನೆರೆಮನೆಯಲ್ಲಿರುವ ಸಂಬಂಧಿಕ ಮಹಿಳೆ ಬಂದ ನಂತರವೇ ಆಕೆ ಎಚ್ಚರಗೊಂಡು ನಡೆದ ಘಟನೆಯನ್ನು ಅವರಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ಶ್ರೀಕಾಂತ್, ಮೂಡುಬಿದಿರೆ ಇನ್ಸೆಕ್ಟರ್ ಸಂದೇಶ್ ಪಿ.ಜಿ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವಾನದಳ, ಪ್ರಾಯೋಗಿಕ ವಿಧಿ ವಿಜ್ಞಾನದವರೂ ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.
ಮನೆಯೊಳಗಡೆ ನುಗ್ಗಿರುವ ಇಬ್ಬರು ಮುಸುಕುಧಾರಿಗಳು ಸ್ಥಳೀಯ ಹಾಗೂ ಈ ಮನೆಯ ವಿಷಯ ಬಲ್ಲವರಾಗಿದ್ದು, ಅವರೇ ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
